ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ಎನ್.ವಿ ರಮಣ ನೇಮಕಕ್ಕೆ ರಾಷ್ಟ್ರಪತಿಗಳಿಂದ ಆದೇಶ, ಏ.24ಕ್ಕೆ ಪ್ರಮಾಣ ವಚನ! | ಜನತಾ ನ್ಯೂಸ್
ಬೆಂಗಳೂರು : ಭಾರತದ ಸರ್ವೋಚ್ಛ ನ್ಯಾಯಾಲಯದ 48ನೇ ಮುಖ್ಯನ್ಯಾಯಮೂರ್ತಿ(ಸಿಜೆಐ)ಯಾಗಿ ಎನ್ ವಿ ರಮಣ ಅವರ ನೇಮಕಕ್ಕಾಗಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಮಂಗಳವಾರ(ಏಪ್ರಿಲ್ 6ರಂದು) ಅಂಕಿತ ಹಾಕಿದ್ದಾರೆ.
ಹಾಲಿ ಸಿಜೆಐ ಶರದ್ ಅರವಿಂದ್ ಬೋಬ್ಡೆ ಅವರ ಅಧಿಕಾರಾವಧಿ ಏಪ್ರಿಲ್ 23ರಂದು ಮುಕ್ತಾಯವಾಗಲಿರುವ ಹಿನ್ನೆಲೆಯಲ್ಲಿ ಅವರ ಉತ್ತರಾಧಿಕಾರಿಯನ್ನಾಗಿ ಎನ್ವಿ ರಮಣ ಅವರನ್ನು ನೇಮಕ ಮಾಡಲಾಗಿದೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಂಗಳವಾರ ಈ ಸಂಬಂಧ ಆದೇಶ ಹೊರಡಿಸಿದ್ದು, ಏಪ್ರಿಲ್ 24ರಂದು ಜಸ್ಟೀಸ್ ಎನ್ ವಿ ರಮಣ ಅವರು ನೂತನ ಸಿಜೆಐ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ವರದಿ ತಿಳಿಸಿದೆ.
ಕಳೆದ ತಿಂಗಳು ಹಾಲಿ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೋಬ್ಡೆ ಅವರು ಮುಂದಿನ ನ್ಯಾಯಮೂರ್ತಿಯಾಗಿ ಎನ್.ವಿ ರಮಣ ಅವರನ್ನು ಶಿಫಾರಸು ಮಾಡಿದ್ದರು. ಇದರಂತೆ ಇದೀಗ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಎನ್.ವಿ ರಮಣ ಅವರನ್ನು ಆಯ್ಕೆ ಮಾಡಲಾಗಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ತಮ್ಮ ಅಂಕಿತವನ್ನು ಹಾಕಿ ನೇಮಕ ಮಾಡಿಕೊಂಡಿದ್ದಾರೆ.
ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪೊನ್ನಾವರಂ ಎಂಬ ಗ್ರಾಮದಲ್ಲಿ 1957ರ ಆಗಸ್ಟ್ 27ರಂದು ಎನ್.ವಿ.ರಮಣ ಜನಿಸಿದ್ದರು. ಅವರು, 1983 ಫೆಬ್ರವರಿ 10 ರಂದು ವಕೀಲರಾಗಿ ಸೇವೆ ಆರಂಭಿಸಿದರು. ನಂತರ 2000ರ ಜೂನ್ ನಲ್ಲಿ ಆಂಧ್ರ ಪ್ರದೇಶದ ಹೈಕೋರ್ಟ್ಗೆ ಖಾಯಂ ನ್ಯಾಯಾಧೀಶರಾಗಿ ನೇಮಕವಾಗಿದ್ದರು.
ಬಳಿಕ 2013 ರಲ್ಲಿ ರಮಣ ಅವರು ದೆಹಲಿ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡು ಸೇವೆ ಸಲ್ಲಿಸಿದ್ದರು. ನಂತರ 2014ರ ಫೆಬ್ರವರಿಯಲ್ಲಿ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಅವರನ್ನು ಉನ್ನತೀಕರಿಸಲಾಯಿತು.